Friday, June 17, 2011

ಕಾಗದದ ದೋಣಿ



ಯಾವುದೋ ಪುಸ್ತಕದ ಮಡಿಲಲ್ಲಿ,
ಹಾಯಾಗಿ ಮಲಗಿದ್ದೆ ನಾನು..
ಅದ್ಯಾಕೋ ಇಷ್ಟಬಂದಂತೆ ಮಡಿಚಿದರು,
ನನ್ನ. ಅಬ್ಬಾ..! ದೋಣಿಯಾಗಿದ್ದೆ ನಾನು.

ಮರೆತೆ ನಾನು, ಮಡಿಚಿಟ್ಟ ನೋವನ್ನು
ಕೇಳಿದಾಗ ಕಂದಮ್ಮಗಳ ಕೇಕೆಯ ಸದ್ದು.
ಹೊರಗೆ ಸುರಿದಿತ್ತು ಜಿಟಿಜಿಟಿ ಮಳೆಯು,
ಕೇಳುತ್ತಿತ್ತು, ಅವಳ ಪುಟ್ಟ ಕಾಲ್ಗೆಜ್ಜೆ ಸದ್ದು.

ಅವಳ ಕೋಮಲ ಪಾದಗಳು ಕೆಸರಾಯ್ತು,
ಹಿಗ್ಗಿನಿಂದಲಿ ಬಂದಳು ಸೇರಿ ಗೆಳೆಯರ ಹಿಂಡು,
ಮಳೆ ನಿಂತ ನೀರಲ್ಲಿ, ನನ್ನ ತೇಲಿಬಿಟ್ಟಾಯ್ತು..
ತೇಲಿದೆ ನಾ, ಹರುಷದಿ ಕುಣಿವ ಮಕ್ಕಳ ಕಂಡು.

ಈ ಸಂತೋಷದ ಗಳಿಗೆಯ ನಡುವೆ,
ಮುಳುಗುವಂತಾದೆ ನಾ, ತುಸು ಗಾಳಿ ಬೀಸಿ,
ಮಳೆಯು ಮತ್ತೆ ಬರುತ್ತಲ್ಲಿತ್ತು.. ಅವಳು
ಅಳುತ್ತಾ ಹೊರಟೇಹೋದಳು, ಅಮ್ಮ ಕರೆದಳೆಂದು

ಇದೇ ಇರಬೇಕು ಹುಟ್ಟು-ಸಾವು.
ಆ ಮುಗ್ಧ ಹೃದಯಗಳ ಸಂತಸಕೆ,
ಮತ್ತೆ ಮತ್ತೆ ನೆನಪಾಗುವೇ ನಾನು.
ನಾನೇ .. ಅವಳ ಅಪ್ಪ ಮಾಡಿಕೊಟ್ಟ
ನಾವಿಕನಿಲ್ಲದ.. ಕಾಗದದ ದೋಣಿ.

Friday, June 3, 2011

ಹಚ್ಚಹಸಿರ ಪರಿಸರ.


ಆಹಾ ಎಲ್ಲೆಲ್ಲೂ ನೋಡಿದರೂ,
ಮನಕೆ ಮುದನೀಡುವ ಹಚ್ಚಹಸಿರು..
ಇದೆ ತಾನೇ, ಪರಮಾನಂದಕೆ ತವರು.

ಎತ್ತರದ ಮರಗಳ ಹೊದಿಕೆಯ
ನುಸುಳಿ ಬರುತಿದೆ ರವಿಕಿರಣಗಳು,
ಆ ಹುಲ್ಲು ಹಾಸಿಗೆಯ ತಾಕಿ,
ಕರಗಿಸುತೆ ಮಂಜಿನ ಇಬ್ಬನಿಯ ಸಾಲು.
ಅಲ್ಲಲ್ಲಿ.. ಮರೆಯಲ್ಲಿ.. ನಸುನಗುತಿವೆ,
ಕಂಪು ಸೂಸುವ ಕಾಡಿನ ಸುಮಗಳು.
ಆ ಸುಮಗಳ ಕಂಪಿನ ಕರೆಗೆ ಏನೋ,
ಎಲ್ಲಿಂದಲೋ ಬಂದವು ಬಣ್ಣದ ಚಿಟ್ಟೆಗಳು..

ಇಂದಿನ ಕಾಂಕ್ರೀಟ್ ಕಾಡಿನಲ್ಲಿ
ಮರೆಯಾಗುತಿದೆ ಈ ಸೊಬಗು.
ಇದು ಹೀಗೆಯೇ ಮರೆಯಾದರೇ,
ಮನುಕುಲ ಮರೆಯಾದರೇನಿಲ್ಲ ಬೆರಗು.!!
ಗೆಳೆಯರೇ ಗಿಡ-ಮರ ಬೆಳೆಸಿರಿ,
ನಮ್ಮ ಈ ಸುಂದರ ಪರಿಸರ ಉಳಿಸಿರಿ,
ನಮ್ಮ ಮುಂದಿನ ಪೀಳಿಗೆಯ,
ಬದುಕಿಗೆ ನೀವು ಬೆಳಕಾಗಿರಿ..!!!

ಇಂದು ವಿಶ್ವ ಪರಿಸರ ದಿನ,
ಪರಿಸರ ರಕ್ಷಿಸಿ, ಭೂಮಿಯ ಉಳಿಸಿ.